ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಏಪ್ರಿಲ್ 6, 2020

ತೋಟದ ಮನೆ : ಭಾಗ-2

ತೋಟದ ಮನೆ
ಭಾಗ-೨
ಪ್ರೇತದ ಅಟ್ಟಹಾಸ
ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದಿಕ್ಕಿನಲ್ಲಿ ಹಿಡಿದು ಎಳೆದಂತೆ ಅವರ ದೇಹ ಸೆಟೆದಿತ್ತು. ಆ ಎಳೆತಕ್ಕೆ ಅವರ ಎದೆ ಉಬ್ಬಿದೇಹ ಹಿಂದಕ್ಕೆ ಬಾಗಿಕುತ್ತಿಗೆ ಮೇಲಕ್ಕೆ ಎತ್ತಿಕೊಂಡು ಅವರ ಮುಖ ಆಕಾಶವನ್ನು ನೋಡುತ್ತಿತ್ತು. ಅವರಿಗೆ ಪ್ರಜ್ಞೆ ಇರುವ ಹಾಗೆ ಕಾಣಲಿಲ್ಲ. ಆದರೂ ಅವರ ತುಟಿಗಳು ಏನನ್ನೋ ಹೇಳಲು ಕಾತುರಪಡುತ್ತಿರುವಂತೆ ಕಾಣುತ್ತಿತ್ತು. ಆ ದೃಶ್ಯ ಎಂತಹವರ ಹೃದಯವನ್ನೂ ಕೆಲಕಾಲ ನಿಲ್ಲಿಸುವಷ್ಟು ಭಯಾನಕವಾಗಿತ್ತು. ಸೂರಿ ಮತ್ತು ಶಾಂತಮ್ಮನಿಗೆ ಅದನ್ನು ಕಂಡು ಏನು ಮಾಡಬೇಕೆನ್ನುವುದೇ ಅರ್ಥವಾಗಲಿಲ್ಲ. ಅವರೆಷ್ಟು ಹೆದರಿದ್ದರೆಂದರೆದೇವಪ್ಪನನ್ನು ಆ ಪರಿಸ್ಥಿತಿಯಿಂದ ಕಾಪಾಡಬೇಕೆಂಬ ಯೋಚನೆಯೂ ಅವರ ತಲೆಗೆ ಹೊಳೆಯಲಿಲ್ಲ. 
ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಭಯ ಹುಟ್ಟಿಸಿದ್ದು ದೇವಪ್ಪನ ಕಣ್ಣುಗಳು. ಅವರ ಕಣ್ಣುಗಳೇಕೆ ಕೆಂಪಗೆ ಹೊಳೆಯುತ್ತಿದ್ದವೆಂದು ಸೂರಿಗೆ ಅರ್ಥವಾಗಲಿಲ್ಲ. ಇಬ್ಬರೂ ಕೆಲಕಾಲ ದೇವಪ್ಪನನ್ನು ಭಯದ ಕಣ್ಣಿನಲ್ಲಿ ನೋಡಿದರು. ದೇವಪ್ಪನನ್ನು ಆ ಸ್ಥಿತಿಯಲ್ಲಿ ನೋಡಲಾಗದೆ ಶಾಂತಮ್ಮನೇ ಹೆಜ್ಜೆ ಮುಂದಿಟ್ಟು ದೇವಪ್ಪನ ಕಡೆಗೆ ನಡೆದರು. ಅವರು ಹೆಜ್ಜೆ ಇಟ್ಟ ತಕ್ಷಣವೇ ದೇವಪ್ಪನ ಮುಖ ಶಾಂತಮ್ಮನ ಕಡೆಗೆ ತಿರುಗಿತು. ದೇವಪ್ಪನ ಕೆಂಡದಂತಹ ಕಣ್ಣುಗಳು ಶಾಂತಮ್ಮನನ್ನು ಇನ್ನೊಂದು ಹೆಜ್ಜೆ ಮುಂದೆ ಇಡದಂತೆ ಮಾಡಿಬಿಟ್ಟವು.  ಶಾಂತಮ್ಮ ನಿಂತಲ್ಲಿಯೇ ನಡುಗಿಹೋದರು. ದೇವಪ್ಪನ ಕಣ್ಣುಗಳು ಶಾಂತಮ್ಮನನ್ನು ನೋಡುತ್ತಿದ್ದ ಪರಿ ಕಂಡು ಸೂರಿ ಶಾಂತಮ್ಮನನ್ನು ಹಿಂದಕ್ಕೆ ಎಳೆದುಕೊಂಡ. ಶಾಂತಮ್ಮನಿಗೆ ನಡುಗುತ್ತಲೇ ಸೂರಿಗೆ ಹೇಳಿದರು "ಸೂರಿನಿಮ್ಮಪ್ಪಂಗೆ ಏನೋ ಆಗ್ಬಿಟ್ಟಿದೆ ಕಣೋ. ಅವರನ್ನ ಕಾಪಾಡಲಿಲ್ಲ ಅಂದ್ರೆ ಹೆಚ್ಚುಕಮ್ಮಿ ಆಗ್ಬಿಡತ್ತೆ". ಶಾಂತಮ್ಮನ ಮನಸ್ಸಿನಲ್ಲಿ ಇದು ಯಾವುದೊ ಕೆಟ್ಟ ಶಕ್ತಿಯ ಕೆಲಸ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆ ಸಮಯದಲ್ಲಿ ಸೂರಿಗೆ ಅದನ್ನೆಲ್ಲಾ ಹೇಳುವುದು ಒಳ್ಳೆಯದಲ್ಲ ಎಂದು ಸುಮ್ಮನಾದರು. 
ಇತ್ತ ಸೂರಿಗೂ ಇದು ಯಾವುದೊ ಕೆಟ್ಟ ಶಕ್ತಿಯ ಕೆಲಸ ಎಂದು ಮನದಟ್ಟಾಗಿತ್ತು. ಆದರೆ ಅವನೂ ತನ್ನ ತಾಯಿಯ ಹತ್ತಿರ ಅದನ್ನೆಲ್ಲಾ ಹೇಳಿದರೆ ಅವರು ಮತ್ತೂ ಹೆದರಬಹುದು ಎಂದು ಸುಮ್ಮನಾದ. ದೇವಪ್ಪನ ಕಣ್ಣುಗಳು ಇನ್ನೂ ದೇವಮ್ಮನನ್ನೇ ನೋಡುತ್ತಿದ್ದವು. ಸೂರಿಗೆ ದೇವಪ್ಪನ ಹತ್ತಿರ ಹೋಗುವಷ್ಟು ಧೈರ್ಯವಿಲ್ಲದಿದ್ದರೂ ತನ್ನ ತಂದೆಯನ್ನು ಕಾಪಾಡದಿದ್ದರೆ ಅವರಿಗೆ ಏನಾದರೂ ಆಗಿಬಿಡುತ್ತದೆ ಎನ್ನುವ ಭಯದಿಂದ ದೇವಪ್ಪನ ಕಡೆಗೆ ನಡೆದ. ಆಗ ದೇವಪ್ಪನ ಕಣ್ಣುಗಳು ಸೂರಿಯ ಕಡೆಗೆ ತಿರುಗಿದವು. ಆ ನೋಟದ ಪ್ರಖರತೆಗೆ ಸೂರಿ ಕಾಲುಗಳು ತಮಗರಿವಿಲ್ಲದಂತೆಯೇ ನಿಂತುಬಿಟ್ಟವು. ಆದರೆ ಸೂರಿಯ ಮೆದುಳಿನ್ನೂ ಕೆಲಸ ಮಾಡುತ್ತಲೇ ಇತ್ತು. ಅವನು ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ದೇವಪ್ಪನ ಕಡೆಗೆ ಆದದ್ದಾಗಲಿ ಎಂದು ನಡೆದೇ ಬಿಟ್ಟ. ಇನ್ನೇನು ಎರಡೇ ಅಡಿ ದೂರ ಅನ್ನುವಷ್ಟರಲ್ಲಿ ದೇವಪ್ಪನ ದೇಹ ಇದ್ದಕ್ಕಿದ್ದಂತೆ ಪುಟಿದೆದ್ದು ಜೋರಾಗಿ ಕರ್ಕಶ ಧ್ವನಿಯಲ್ಲಿ ಆಕಾಶ ನೋಡುತ್ತಾ ಕಿರುಚಿತು. ಸೂರಿ ಹೆದರಿ ಹಿಂದುರುಗಿ ಬರಲು ಹೋಗಿ ಮುಗ್ಗರಿಸಿ ಬಿದ್ದ. ಶಾಂತಮ್ಮನೂ ಭಯದಿಂದ ಕಿರುಚಿ ಹಿಂದಕ್ಕೆ ತಿರುಗಿದರು. ಸೂರಿ ಸಾವರಿಸಿಕೊಂಡು ಎದ್ದು ಹಿಂದಕ್ಕೆ ತಿರುಗಿ ಟಾರ್ಚು ಬಿಟ್ಟಾಗ ದೇವಪ್ಪನ ದೇಹ ನೆಲದ ಮೇಲೆ ಬಿದ್ದಿತ್ತು.
ನೆಲದ ಮೇಲೆ ಬಿದ್ದಿದ್ದ ತಂದೆಯನ್ನು ಕಂಡು ಸೂರಿಗೆ ಅದೇನನ್ನಿಸಿತೋ ಏನೋ, "ಅಪ್ಪಾ..." ಎನ್ನುತ್ತಾ ಓಡಿ ಅವರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡ. ತನ್ನ ತಂದೆಯನ್ನು ಆ ಪರಿಸ್ಥಿತಿಯಲ್ಲಿ ನೋಡಿ ಅವನ ತಂದೆಯ ಮೇಲಿನ ಪ್ರೀತಿ ಅವನದೇ ಭಯವನ್ನು ಹತ್ತಿಕ್ಕಿತ್ತು. ಅವರನ್ನು ಎತ್ತಿಕೊಂಡು ಮನೆಯೊಳಗೆ ಬಂದ. ಹಾಲಿನಲ್ಲಿದ್ದ ದಿವಾನು ಮಂಚದ ಮೇಲೆ ಅವರನ್ನು ಮಲಗಿಸಿ ಶಾಂತಮ್ಮನಿಗೆ ಸ್ವಲ್ಪ ನೀರು ತರಲು ಹೇಳಿದ. ಶಾಂತಮ್ಮ ಅಡಿಗೆ ಮನೆಯಿಂದ ಒಂದು ಲೋಟದಲ್ಲಿ ನೀರು ತಂದರು. ಸ್ವಲ್ಪ ನೀರನ್ನು ಅವರ ಮುಖದ ಮೇಲೆ ಸಿಂಪಡಿಸಿ ಅವರನ್ನು ಏಳಿಸಲು ಪ್ರಯತ್ನಪಟ್ಟ. ದೇವಪ್ಪನಿಗೆ ಪ್ರಜ್ಞೆಯೇ ಇರಲಿಲ್ಲ.  ಇಬ್ಬರೂ ಸೇರಿ ಮತ್ತಷ್ಟು ಬಾರಿ ದೇವಪ್ಪನನ್ನು ಏಳಿಸಲು ಪ್ರಯತ್ನಿಸಿದರೂ ಏನೂ ಫಲ ಸಿಗಲಿಲ್ಲ. ತಾಯಿ-ಮಗ ಇಬ್ಬರೂ ದೇವಪ್ಪನ ಸ್ಥಿತಿ ಕಂಡು ದುಃಖಿಸಿದರು. ಶಾಂತಮ್ಮ ಒಳಗೊಳಗೇ ಇದು ಯಾರೋ ಆಗದವರು ಮಾಡಿಸಿದ ಕೆಲಸವೆನ್ನಿಸಿತು. ಸೂರಿಗೆ ಇದೆಲ್ಲ ಹೊಸತು. ಮಾಟ-ಮಂತ್ರಗಳಲ್ಲಿ ಅಷ್ಟೊಂದು  ನಂಬಿಕೆ ಇರಲಿಲ್ಲವಾದ್ದರಿಂದ ಅವನಿಗೆ ಇದಕ್ಕೆಲ್ಲ ಏನು ಕಾರಣವಿರಬಹುದು ಎಂದು ವೈಜ್ಞಾನಿಕವಾಗಿಯೇ ಉತ್ತರ ಹುಡುಕಲು ಪ್ರಯತ್ನಿಸಿದ.
ಇನ್ನು ಶಾಂತಮ್ಮನಿಗಾಗಲಿ ಸೂರಿಗಾಗಲಿ ನಿದ್ರೆ ಬರುವ ಸಾಧ್ಯತೆಯೇ ಇರಲಿಲ್ಲ. ಇಬ್ಬರೂ ದೇವಪ್ಪನ ಹತ್ತಿರವೇ ನೆಲದಲ್ಲಿ ಕುಳಿತು ಯೋಚನೆಯಲ್ಲಿ ಮುಳುಗಿಹೋದರು. ಶಾಂತಮ್ಮ ಸೂರಿಗೆ ಇನ್ನೊಮ್ಮೆ ದೇವಪ್ಪ ಹೇಳಿದ್ದೆಲ್ಲವನ್ನೂ ಸರಿಯಾಗಿ ಹೇಳುವಂತೆ ಕೇಳಿದರು. ಅದರಂತೆಯೇ ಸೂರಿ ದೇವಪ್ಪ ಅವನಿಗೆ ಹೇಳಿದ್ದೆಲ್ಲವನ್ನೂ ವಿವರಿಸಿದ. ಶಾಂತಮ್ಮನಿಗೆ ಇದೊಂದು ಕೆಟ್ಟ ಶಕ್ತಿಯ ಕೆಲಸ ಎನ್ನುವುದು ಸ್ಪಷ್ಟವಾಯ್ತು.
ಇದೆಲ್ಲ ಯಾರೋ ನಾವು ಚೆನ್ನಾಗಿರೋದನ್ನ ನೋಡಿ ಮಾಡಿರೋ ಕೆಲಸ. ಯಾರೋ ನಿಮ್ಮಪ್ಪನಿಗೆ ಏನೋ ಮಾಡಿಸಿದರೆ ಕಣೋ ಸೂರಿಎಂದು ಅಳುವುದಕ್ಕೆ ಶುರುಮಾಡಿದರು. 
ಬೇರಾವುದೇ ದಿನವಾಗಿದ್ದರೆ ಸೂರಿ ಅದನ್ನೆಲ್ಲಾ ನಂಬದೆ ಶಾಂತಮ್ಮನ ಮಾತನ್ನು ತಳ್ಳಿಹಾಕಿಬಿಡೋನು. ಆದರೆ ಅವತ್ತು ಅವನು ಕಣ್ಣಾರೆ ಕಂಡ ಕೆಲವು ದೃಶ್ಯಗಳು ಅವನು ಅಲ್ಲಿಯವರೆಗೂ ತಿಳಿದಿದ್ದದ್ದನ್ನೆಲವನ್ನೂ ತಲೆಕೆಳಗಾಗಿಸಿತ್ತು. ಅವನ ಕಲಿತಿದ್ದ ವೈಜ್ಞಾನಿಕ ವಿಚಾರಗಳುಮತ್ತು ಸಿದ್ಧಾಂತಗಳು ತನ್ನ ಕಣ್ಣುಗಳು ಕಂಡದ್ದನ್ನೇ ವಿವರಿಸದಾದವು.
ಯಾರೋ ನಮ್ಮವರೇ ಮಾಡಿರೋ ಕೆಲಸ ಇದು ಶಾಂತಮ್ಮ ಮುಂದುವರೆಸಿದರು. ಇಂತಹ ಮನೆಹಾಳು ಕೆಲಸ ಮಾಡಿರೋರಿಗೆ ಆ ದೇವರು ಒಳ್ಳೇದು ಮಾಡೋಲ್ಲ ಬಿಡು ಶಾಂತಮ್ಮ ಕಣ್ಣೀರು ಒರೆಸಿಕೊಳ್ಳುತ್ತಲೇ ಮಾತನಾಡಿದರು. ಅವರ ಮಾತಲ್ಲಿ ಎಷ್ಟು ನಿಜವಿತ್ತೋ ಸುಳ್ಳಿತ್ತೋ ಸೂರಿಗೆ ಅರ್ಥವಾಗಲಿಲ್ಲ. ಅವರ ಮಾತನ್ನು ಸುಮ್ಮನೇ ಕೇಳಿಸಿಕೊಂಡ. ಅವತ್ತಿನ ಘಟನೆಗಳು ಅವನ ತಾಯಿಯ ಮಾತಲ್ಲಿ ನಿಜವಿದ್ದರೂ ಇರಬಹುದು ಎನ್ನುವಹಾಗೆ ಮಾಡಿದ್ದವು. 
ಈ ದೆವ್ವಭೂತಮಾಟಮಂತ್ರ ಎಲ್ಲಾ ನಿಜವೇನಮ್ಮಾ??” ಸೂರಿಗೆ ಮನಸ್ಸಿಲ್ಲದಿದ್ದರೂ ಮಾತು ಮುಂದುವರೆಸಲಿಕ್ಕೆಂದು ಶಾಂತಮ್ಮನಿಗೆ ಕೇಳಿದ. ಅವನಿಗೆ ಅವನ ತಾಯಿಯ ಉತ್ತರ ಮೊದಲೇ ಗೊತ್ತಿತ್ತು.
ಮತ್ಯಾಕೆ ನಿಮ್ಮಪ್ಪ ಹಾಗಿದ್ರು ಅಂತ ನೀನೇ  ಹೇಳು ನೋಡೋಣ! ದೇವಪ್ಪನನ್ನು ಅವರಿಬ್ಬರೂ ಕಂಡ ದೃಶ್ಯವನ್ನು ನೆನಪಿಸಿ ಕೇಳಿದರು.
ಸೂರಿಗೂ ಅದರ ಉತ್ತರ ಗೊತ್ತಿರಲಿಲ್ಲ. ಹೇಳಬೇಕೆಂದರೆ ಇಂತಹ ಸನ್ನಿವೇಶವೊಂದನ್ನು ಜೀವನದಲ್ಲಿ ಅವನು ಎದುರಿಸಬೇಕಾಗಬಹುದೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅವನಿಗೆ ಈಗಲೂ ಅಂತಹುದೊಂದು ದೃಶ್ಯವನ್ನು ತಾನು ನಿಜವಾಗಿಯೂ ನೋಡಿದೆನೇ ಎನ್ನುವಷ್ಟು ನಿಗೂಢವಾಗಿತ್ತು ಆ ದೃಶ್ಯ.
ತುಂಬಾ ಹೊತ್ತು ತಾಯಿ ಮತ್ತು ಮಗ ಇಬ್ಬರೂ ದೇವಪ್ಪನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಲ ಹಾಕಿದರು. ಎಷ್ಟು ಹೊತ್ತಾದರೂ ದೇವಪ್ಪನಿಗೆ ಪ್ರಜ್ಞೆಯೇ ಬರಲಿಲ್ಲ. ಸೂರಿ ಹಲವಾರು ಬಾರಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಗ್ಗೆ ಶಾಂತಮ್ಮನಿಗೆ ಹೇಳಿದರೂ ಶಾಂತಮ್ಮ ಅದನ್ನು ನಿರಾಕರಿಸಿ ಇದೆಲ್ಲ ಆಸ್ಪತ್ರೆಯಿಂದ ವಾಸಿಯಾಗುವ ಖಾಯಿಲೆಯಲ್ಲ. ಅವರು ಏಳೋವರೆಗೂ ಸುಮ್ಮನಿರು ಎಂದು ಹೇಳಿ ಸುಮ್ಮನಾಗಿಸಿದರು. ಸೂರಿ ಒಬ್ಬನೇ ದೇವಪ್ಪನನ್ನು ಆಸ್ಪತ್ರಗೆ ಕರೆದುಕೊಂಡು ಹೋಗಲು ಸಾದ್ಯವಿರಲಿಲ್ಲ. ಮನೆಯಲ್ಲಿ ಬೈಕು ಬಿಟ್ಟರೆ ಬೇರೆ ವಾಹನವಿರಲಿಲ್ಲ. ಎರೆಡು ಕಿಲೋಮೀಟರು ದೂರವಿರುವ ಹಳ್ಳಿಯಿಂದ ಯಾರದಾದರೂ ಆಟೋ ತೆಗೆದುಕೊಂಡು ಬರಬಹುದು. ಆದರೆ ಅದೂ ಕೂಡ ಬೆಳಗಾಗುವ ಹೊರತು ಸಾದ್ಯವಿರಲಿಲ್ಲ. 
* * *  * *
ಬೆಳಗಿನ ಜಾವಾ ೬ ಗಂಟೆಗೆ ಸರಿಯಾಗಿ ಸೂರಿಯ ಮೊಬೈಲಿಗೆ ಅವನ ತಮ್ಮ ಹರೀಶನಿಂದ ಫೋನು ಬಂತು. ಇಷ್ಟು ಹೊತ್ತಿಗೆ ಇವನ್ಯಾಕೆ ಫೋನು ಮಾಡುತ್ತಿದ್ದಾನೆ ಎಂದುಕೊಂಡೇ ಫೋನು ಎತ್ತಿದ.
ಅಣ್ಣಾ... ಆ ಕಡೆಯಿಂದ ಧ್ವನಿ.
ಏನಾಯ್ತೋಏನು ಇಷ್ಟೊತ್ತಲ್ಲಿ ಫೋನು?”
ಹೇಗಿದ್ದೀಯ ಅಣ್ಣಯಾಕೆ ಉಷಾರಿಲ್ಲಂತೆ ನಿಂಗೆ...” ಹರೀಶ ಕೇಳಿದ.
ಉಷಾರಿಲ್ವಾನಿಂಗ್ಯಾರೋ ಹಾಗಂತ ಹೇಳ್ದೋರುನಾನು ಚೆನ್ನಾಗೆ ಇದೀನಿ.
ನನಗೆ ರಾತ್ರಿ ಅಪ್ಪ ಫೋನು ಮಾಡಿದ್ರು. ನಿಂಗೆ ಉಷಾರಿಲ್ಲ ಅಂತ. ಮತ್ತೇನೇನೋ ಮಾತಾಡಿದ್ರು. ನಾನು ನಿದ್ರೆ ಮೂಡಲ್ಲಿದ್ದೆ. ಸರಿಯಾಗಿ ಏನು ಅರ್ಥ ಆಗ್ಲಿಲ್ಲ.
ಸೂರಿಗೆ ಇದೆಲ್ಲಾ ಯಕ್ಷಪ್ರಶ್ನೆಯಂತೆ ಕಂಡಿತು. ರಾತ್ರಿ ದೇವಪ್ಪ ಹರೀಶನಿಗೆ ಫೋನು ಮಾಡಿದ್ದರ ಉದ್ದೇಶ ಏನೆಂದು ಸೂರಿಗೆ ಗೊತ್ತಾಗಲಿಲ್ಲ. ಅದರಲ್ಲೂ ತನಗೆ ಹುಷಾರಿಲ್ಲ ಎಂದು ಹೇಳುವುದರ ಹಿಂದಿನ ಉದ್ದೇಶವೂ ತಿಳಿಯಲಿಲ್ಲ.
ಎಷ್ಟು ಹೊತ್ತಿಗೆ ಫೋನು ಮಾಡಿದ್ರು?”
ಬೆಳಗ್ಗೆ ನಾಲ್ಕೂವರೆಗೆ...
ಸೂರಿ ಒಮ್ಮೆ ಬೆಚ್ಚಿದ. ಮೂರೂವರೆಯಿಂದ ಪ್ರಜ್ಞೆಯಿಲ್ಲದೆ ಮಲಗಿರುವ ದೇವಪ್ಪ ನಾಲ್ಕೂವರೆಗೆ ಫೋನು ಮಾಡುವುದಕ್ಕೆ ಹೇಗೆ ಸಾಧ್ಯ?!! ಸೂರಿಗೆ ತಲೆಯೇ ಕೆಟ್ಟಂತಾಯಿತು.
ಹರೀಶನಿಗೆ ಈಗ ಅವರು ಆ ಸಮಯದಲ್ಲಿ ಫೋನು ಮಾಡುವುದಕ್ಕೆ ಹೇಗೆ ಸಾಧ್ಯವಿಲ್ಲ ಎಂದು ಹೇಳುವುದು ಸೂರಿಗೆ ಬಹಳವೇ ಕಷ್ಟವಾಯ್ತು. ಅವನು ಹರೀಶನಿಗೆ ಬಿಟ್ಟದ್ದು ಬಿಟ್ಟು ಕೂಡಲೇ ಮನೆಗೆ ಬರುವಂತೆ ಹೇಳಿದ. 
ಹರೀಶನಿಗೆ ಸೂರಿ ಮನೆಗೆ ಬಂದಿರುವ ವಿಷಯವೇ ಗೊತ್ತಿರಲಿಲ್ಲ. ಅದರಲ್ಲೂ ಅವನು ಹಾಗೆ ಹೇಳಿದ್ದು ಕೇಳಿ ಗಾಬರಿಯಾಯ್ತು. ಯಾಕಣ್ಣ?? ಒಬ್ಬೊಬ್ರು ಒಂದೊಂದು ಥರ ಮಾತಾಡ್ತಾ ಇದೀರಿ. ಏನು ವಿಷಯ?”
ಏನು ಇಲ್ಲ ಹರೀಶ. ನೀನಂದುಕೊಂಡಂತೇನು ಇಲ್ಲ. ಆದರೆ ಈಗ ಎಲ್ಲವನ್ನೂ ಫೋನಿನಲ್ಲಿ ಬಿಡಿಸಿ ಹೇಳುವಷ್ಟು ಸಮಯ ಕೂಡ ಇಲ್ಲ. ಹಾಗಾಗೇ ಬಂದುಬಿಡು ಅಂದದ್ದು.
ಹರೀಶನಿಗೆ ಸೂರಿಯ ಮಾತುಗಳು ಇನ್ನೂ ಸ್ಪಷ್ಟವಾಗದಿದ್ದರೂಏನೋ ವಿಷಯವಿಲ್ಲದೆ ಸೂರಿ ಹಾಗೆಲ್ಲ ಹೇಳುವವನಲ್ಲ ಎಂದು ಒಪ್ಪಿಕೊಂಡ.
ಹರೀಶನ ಹತ್ತಿರ ನಡೆದ ಮಾತುಕಥೆಯನ್ನೆಲ್ಲಾ ಸೂರಿ ಶಾಂತಮ್ಮನಿಗೆ ಹೇಳಿದ. ಸೂರಿಯಂತೆ ಅವರಿಗೂ ನಡೆಯುತ್ತಿರುವ ಸಂಗತಿಗಳ ಅರ್ಥವಾಗಲಿಉದ್ದೇಶವಾಗಲಿ ತಿಳಿಯಲಿಲ್ಲ. ಅವರು ಎದ್ದು ಹೋಗಿ ದೇವಪ್ಪನ ಫೋನು ಹುಡುಕಿ ತಂದರು. ಸೂರಿ ಅದರಲ್ಲಿ ಅವರು ಹರೀಶನಿಗೆ ನಿಜವಾಗಿಯೂ ಫೋನು ಮಾಡಿದ್ದಾರೆಯೇ ಎಂದು ನೋಡಿದ. ಅವರ ಫೋನಿನಿಂದ ಹರೀಶನಿಗೆ ಅಂದು ಯಾವ ಫೋನೂ ಹೋಗಿರಲಿಲ್ಲ. ಹಾಗಾದರೆ ಹರೀಶನಿಗೆ ಫೋನೂ ಬಂದದ್ದು ಹೇಗೆಇದೆಲ್ಲದರ ಹಿಂದೆ ಯಾವುದೊ ಕಾಣದ ಶಕ್ತಿಗಳ ಕೈವಾಡವಿಲ್ಲದೆ  ಹೀಗೆಲ್ಲ ಆಗುವುದು ಸಾಧ್ಯವಿಲ್ಲ ಎಂದು ಸೂರಿಗೂ ಮನದಟ್ಟಾಯಿತು. ತಕ್ಷಣವೇ ಹರೀಶನಿಗೆ ಫೋನು ಮಾಡಿ ಹೇಳೋಣವೆಂದುಕೊಂಡರೆ ಅವನು ಹೆದರಿಯಾನು ಎಂದು ಸುಮ್ಮನಾದ. ಹೇಗಿದ್ದರೂ ಇನ್ನೆರೆಡು ಗಂಟೇಲಿ ಮನೆಗೆ ಬರುತ್ತಾನಲ್ಲ ಎಂದು ಸುಮ್ಮನಾದ.
*****
ಬೆಳಗಿನ ಜಾವಾ ೭ ಗಂಟೆಯಾದರೂ ದೇವಪ್ಪನ ಸ್ಥಿತಿಯಲ್ಲಿ ಯಾವುದೇ ಸುಧಾರಣೆಗಳು ಕಂಡುಬರಲಿಲ್ಲ. ತನ್ನ ತಂದೆಗೆ ಇನ್ನೂ ಪ್ರಜ್ಞೆ ಬರದಿದ್ದುದಕ್ಕೆ ಬೇಸರಗೊಂಡು ಸೂರಿ ಏನು ಮಾಡಬೇಕೆಂದು ತೋಚದೆ ಹಾಗೇ ಸೋಫಾ ಮೇಲೆ ಒರಗಿದ. ಶಾಂತಮ್ಮ ಇನ್ನೂ ತನ್ನ ಗಂಡನ ಪಕ್ಕದಲ್ಲಿಯೇ ಕುಳಿತು ಅವರಿಗೆ ಗಾಳಿ ಬಿಸುತ್ತಿದ್ದರು. ಅಷ್ಟರಲ್ಲಿ ದೇವಪ್ಪನ ಫೋನಿಗೆ ಯಾರದೋ ಫೋನು ಬಂತು. ಬರೀ ನಂಬರು ಮಾತ್ರ ಕಾಣುತ್ತಿತ್ತು. ಯಾರದ್ದೆಂದು ಗೊತ್ತಾಗದೆ ಸೂರಿಯೇ ಫೋನು ಎತ್ತಿದ.
ಹಲೋ...ಯಾರು?” ಸೂರಿ ಕೇಳಿದ.
ದೆವ್ವಪ್ಪನೋರೇಎಲ್ಲಿದಿರಾ?” ಅತ್ತ ಕಡೆಯಿಂದ ಧ್ವನಿಯೊಂದು ಬಂತು.
ಯಾರು ಮಾತಾಡೋದು?” ಈ ಕಡೆಯಿಂದ ಸೂರಿ ಕೇಳಿದ. ಅವನಿಗೆ ಧ್ವನಿ ಸ್ವಲ್ಪ ಪರಿಚಿತವೆನಿಸಿದರು ಯಾರದ್ದೆಂದು ಹೊಳೆಯಲಿಲ್ಲ.
ಯಾರು ಅವರ ಮಗನಾ ಮಾತಾಡೋದು?” ಅತ್ತ ಕಡೆಯಿಂದ ಪ್ರಶ್ನೆ. 
ಹೌದು. ಆದ್ರೆ ನೀವ್ಯಾರು ಮಾತಾಡೋದು ಗೊತ್ತಾಗ್ತಾ ಇಲ್ಲ.
ನಾನು ಕಣಪ್ಪನಿಮ್ಮ ಮನೆದೇವರ ದೇವಸ್ಥಾನದ ಪೂಜಾರಿ.
ಸೂರಿಗೆ ತಾವು ಹಿಂದಿನ ದಿನ ದೇವಸ್ಥಾನಕ್ಕೆ ಹೋಗಿದ್ದ ಸಂಗತಿ ನೆನಪಿಗೆ ಬಂತು.
ಹಾ... ಹೇಳಿ ಸ್ವಾಮಿಗಳೇ.
ಎಲ್ಲಿದಿರಾ ನೀವು?” ಪೂಜಾರಿ ಕೇಳಿದರು.
ನಾವು ಮನೇಲೆ ಇದೀವಿ ಸ್ವಾಮಿಗಳೇ. ಯಾಕೆ ಏನಾಯ್ತು?”
ಓ...ನೀವು ನಾನು ಹೇಳಿದವರನ್ನು ಕಾಣಲಿಕ್ಕೆ ಹೋಗಲಿಲ್ಲವೇ?”
ಸೂರಿಗೆ ಹೇಗೆ ಉತ್ತರ ಹೇಳಬೇಕೋ ಗೊತ್ತಾಗಲಿಲ್ಲ. ಇಲ್ಲೊಂದು ಸಮಸ್ಯೆ ಬಂದುಬಿಟ್ಟಿದೆ ಸ್ವಾಮಿಗಳೇ. ನಮಗೆ ಇವತ್ತು ಹೋಗೋದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ.
ಆಗಲೇ ಅದು ಶುರುವಾಗಿಬಿಟ್ಟಿತೇ?” ಪೂಜಾರಿಗಳು ನಡೆದ ಅಚಾತುರ್ಯಗಳ ಬಗ್ಗೆ ತಿಳಿದವರಂತೆ ಬೇಸರದಿಂದ ಕೇಳಿದರು.
ಅವರ ಮಾತುಗಳನ್ನು ಕೇಳಿ ಸೂರಿಗೆ ಆಶ್ಚರ್ಯವಾಯ್ತು. ಅದು ಎಂದರೆ?”
ಪೂಜಾರಿಗಳು ಸಮಾಧಾನದಿಂದಲೇ ಹೇಳಿದರು ನೋಡಪ್ಪಯಾರೋ ನಿಮಗೆ ಆಗದವರು ನಿಮ್ಮ ತಂದೆಯ ಮೇಲೆ ಮಾಟ ಮಾಡಿಸಿದ್ದಾರೆ. ಅವರ ಜೀವಕ್ಕೆ ಕಂಟಕವಿದೆ. ಇದನ್ನೆಲ್ಲಾ ನಿನ್ನೆಯೇ ನಿನಗೆ ಹೇಳಬೇಕೆಂದಿದ್ದೆ. ಆದರೆ ಸಮಯ ಸಿಗಲಿಲ್ಲ. ನಿಜ ಹೇಳಬೇಕೆಂದರೆ ಇಷ್ಟು ಬೇಗ ಅವರಿಗೆ ತೊಂದರೆಯಾಗಬಹುದು ಎಂದು ನಾನು ಎಣಿಸಿರಲಿಲ್ಲ.
ದೇವಪ್ಪನಿಗೆ ತೊಂದರೆಯಾದುದು ಇವರಿಗೆ ಹೇಗೆ ಗೊತ್ತಾಯಿತು ಎಂದು ಸೂರಿಗೆ ಸಂಶಯ ಬಂತು. ಅದರಲ್ಲೂ ಹರೀಶನಿಗೆ ಬೇರೆ ದೇವಪ್ಪನ ಫೋನಿನಿಂದಲೇ ಫೋನು ಹೋಗಿದ್ದು ಸೂರಿಗೆ ಈಗ ಯಾರ ಜೊತೆ ಮಾತನಾಡುತ್ತಿದ್ದೇನೆ ಎಂದೂ ಅನ್ನಿಸಿದ್ದು ನಿಜ. ಹರೀಶನಿಗೆ ಫೋನು ಹೋದಂತೆ ನನಗೂ ಬಂದಿದ್ದರೆಯಾವುದಕ್ಕೂ ಎಚ್ಚರವಾಗಿರುವುದು ಒಳಿತು ಎಂದುಕೊಂಡ.
ನೀವು ಎಲ್ಲಿಂದ ಫೋನು ಮಾಡುತ್ತಿದ್ದೀರಿ ಸ್ವಾಮಿಗಳೇ?” ಸೂರಿಗೆ ತಾನು ನಿಜವಾಗಿಯೂ ಪೂಜಾರಿಗಳ ಜೊತೆಯೇ ಮಾತನಾಡುತ್ತಿದ್ದೇನೆಯೇ ಎಂದು ಗೊತ್ತು ಮಾಡಿಕೊಳ್ಳಲಿಕ್ಕೆ ಕೇಳಿದ. ನಿಜವಾಗಿಯೂ ಪೂಜಾರಿಗಳೇ ಮಾತನಾಡುತ್ತಿದ್ದರೆ ಅವರಿಗೆ ತನ್ನ ಪ್ರಶ್ನೆಯ ಒಳಾರ್ಥ ಗೊತ್ತಾಗಬಹುದು ಎಂಬ ಆಶಾವಾದದಿಂದ.
ನಿನ್ನ ಪ್ರಶ್ನೆಯ ಅರ್ಥ ನನಗೆ ಗೊತ್ತಾಯಿತು. ಪೂಜಾರಿಗಳು ಸೂರಿಯ ಮನಸ್ಸನ್ನು ಅರ್ಥಮಾಡಿಕೊಂಡವರಂತೆಯೇ ಉತ್ತರಿಸಿದರು.  ಹೆದರಬೇಡನಾನು ಈಗ ದೇವಸ್ಥಾನದ ಒಳಗಿಂದಲೇ ಮಾತನಾಡುತ್ತಿದ್ದೇನೆ. ಆ ಮಾದಪ್ಪನ ಸನ್ನಿದಿಯಲ್ಲಿ ಯಾರೂ ಕೆಡಕು ಮಾಡುವ ಯೋಚನೆಯನ್ನು ಮಾಡಲಾರರು.
ಸೂರಿಯ ಮನೆದೇವರ ಹೆಸರು ಮಾದಪ್ಪ. ಪೂಜಾರಿಗಳು ಆ ಹೆಸರನ್ನು ಹೇಳಿದ ನಂತರವೇ ಸೂರಿಗೆ ಅತ್ತ ಕಡೆಯಿಂದ ಮಾತನಾಡುತ್ತಿದ್ದವರ ಮೇಲೆ ನಂಬಿಕೆ ಬಂದದ್ದು.  
ನಮ್ಮ ಮನೆಯಲ್ಲಿ ಸಮಸ್ಯೆ ಶುರುವಾಗುತ್ತದೆ ಎಂದು ನಿಮಗೆ ಮೊದಲೇ ಗೊತ್ತಿತ್ತೇ?”
ಇಲ್ಲನಿನ್ನೆ ನಿಮ್ಮ ತಂದೆಯನ್ನು ನೋಡಿದ ನಂತರವೇ ಗೊತ್ತಾದದ್ದು. ಅವರನ್ನು ಯಾವುದೊ ದುಷ್ಟ ಶಕ್ತಿ ಹಿಂಬಾಲಿಸುತ್ತಿದೆ. ನನಗದು ನಿನ್ನೆಯೇ ಅನಿಸಿತ್ತು. ದೇವರ ಸನ್ನಿದಿಯಲ್ಲಿ ಅವರ ಹಾವ ಭಾವಗಳನ್ನು ನೋಡಿದ ಮೇಲೆ ನನಗದು ಸ್ಪಷ್ಟವಾಯ್ತು.
ದುಷ್ಟ ಶಕ್ತಿ ಎಂದರೆ?”
ನಿಮ್ಮ ತಂದೆಗೆ ಕೆಡುಕನ್ನು ಮಾಡಲೆತ್ನಿಸುತ್ತಿರುವ ಶಕ್ತಿ.
ಇದೆಲ್ಲ ಯಾಕಾಗುತ್ತಿದೆ ಸ್ವಾಮಿಗಳೇ?”
ಅದನ್ನೆಲ್ಲಾ ಪರಿಶೀಲಿಸುವ ಸಮಯ ಇದಲ್ಲ. ನೀವು ಮೊದಲು ನಾನು ಹೇಳಿದವರ ಹತ್ತಿರ ಹೋಗಿ ಬನ್ನಿ. ನಿಮಗೆ ಅವರೇ ಎಲ್ಲಾ ಹೇಳುತ್ತಾರೆ.
ಸೂರಿಗೆ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಡೆದ ಘಟನೆಗಳು ತನ್ನ ಯೋಚನಾ ಶಕ್ತಿಯನ್ನೇ ಕುಂಠಿತಗೊಳಿಸಿಬಿಟ್ಟಿದ್ದವು. ನಡೆದದ್ದನ್ನೆಲ್ಲಾ ಪೂಜಾರಿಗಳಿಗೆ ಹೇಳದೆ ಅವನಿಗೆ ಬೇರೆ ವಿಧಿಯಿರಲಿಲ್ಲ. ತನ್ನ ತಂದೆಯ ಪರಿಸ್ಥಿತಿ ಅವರಿಗೆ ಗೊತ್ತಾದರೆ ಅವರು ಬೇರೇನಾದರೂ ಉಪಾಯ ಹೇಳಬಹುದು ಎಂದುಕೊಂಡು ಪೂಜಾರಿಗಳಿಗೆ ನಿನ್ನೆ ರಾತ್ರಿಯ ಘಟನೆಗಳನ್ನೆಲ್ಲಾ ಹೇಳಿದ. ಪೂಜಾರಿಗಳು ಕುತೂಹಲದಿಂದ ಕೇಳಿಸಿಕೊಂಡರು. 
ದೇವಪ್ಪ ಇನ್ನೂ ಪ್ರಜ್ಞೆಯಿಲ್ಲದೆ ಮಲಗಿರುವುದು ಕೇಳಿ ಪೂಜಾರಿಯು ಸೂರಿಗೆ ದೇವರ ಮನೆಯಿಂದ ವಿಭೂತಿ ತರಲು ಹೇಳಿದರು. ಅದರಂತೆ ಸೂರಿ ದೇವರ ಮನೆಯಿಂದ ವಿಭೂತಿ ತಂದ. ಪೂಜಾರಿಗಳು ಮೊದಲು ಅದನ್ನು ತಾನು ಹಚ್ಚಿಕೊಳ್ಳುವಂತೆ ಹೇಳಿದರು. ಇದು ಸೂರಿಯ ರಕ್ಷಣೆಗಾಗಿ. ನಂತರ ಮನೆಯಲ್ಲಿದ್ದ ಇತರರಿಗೂ ಹಚ್ಚಲು ಹೇಳಿದರು. ಸೂರಿಯೇ ಶಾಂತಮ್ಮನಿಗೂ ವಿಭೂತಿ ಹಚ್ಚಿದ. ನಂತರ ಪೂಜಾರಿಗಳು ಮನೆಯ ಎಲ್ಲಾ ಬಾಗಿಲುಗಳನ್ನು ತಗೆಯಲು ಹೇಳಿದರು. ಸೂರಿ ಹಾಗೆಯೇ ಮಾಡಿದ. ನಂತರ ದೇವಪ್ಪನ ತಲೆಯ ಹತ್ತಿರ ಹೋಗಿ ನಿಲ್ಲಲು ಹೇಳಿದರು. ಸೂರಿ ದೇವಪ್ಪನ ತಲೆಯ ಹತ್ತಿರ ಬಂದು ನಿಂತ. ವಿಭೂತಿಯನ್ನು ಬಲಗೈಯಲ್ಲಿ ಹಿಡಿದು ನಿಲ್ಲಲು ಹೇಳಿದರು. ಸೂರಿ ಹಾಗೇ ಮಾಡಿದ. 
ಈಗ ನಾನು ಹೇಳೋದನ್ನು ನೀನು ಹೇಳಬೇಕು. ಯಾಕೆ ಏನು ಎಂದು ಕೇಳಬಾರದು. ಸುಮ್ಮನೆ ನಾನು ಹೇಳೋದನ್ನು ಹೇಳಿದರೆ ಸಾಕು.
ಸೂರಿಗೆ ಅದನ್ನೆಲ್ಲಾ ಪ್ರಶ್ನಿಸುವ ಉತ್ಸಾಹವೇ ಇಂಗಿಹೋಗಿತ್ತು. ಅವನು ಎಲ್ಲದಕ್ಕೂ ಸುಮ್ಮನೆ ಹೂಗುಟ್ಟಿದ. 
ಪೂಜಾರಿಗಳು ಯಾವುದೊ ಮಂತ್ರವನ್ನು ಹೇಳಲು ಶುರುಮಾಡಿದರು. ಮಂತ್ರ ಸಂಸ್ಕೃತದಲ್ಲಿದ್ದುದರಿಂದ ಸೂರಿಗೆ ಏನೂ ಅರ್ಥವಾಗಲಿಲ್ಲ. ಕೆಲವೊಮ್ಮೆ ಸೂರಿಯ ನಾಲಿಗೆ ತಿರುಗದಷ್ಟು ಕ್ಲಿಷ್ಟವಿತ್ತು ಮಂತ್ರ. ಪೂಜಾರಿಗಳು ಇವನೆಷ್ಟು ಬಾರಿ ತಪ್ಪು ಮಾಡಿದರೂ ಸ್ವಲ್ಪವೂ ಬೇಜಾರಾಗದೆ ಮತ್ತೆ ಅದೇ ಸಾಲನ್ನು ಹೇಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ದೇವಪ್ಪನ ದೇಹದಲ್ಲಿ ಚಲನೆ ಕಂಡಿತು. ನಿದ್ರೆಯಿಂದ ಏಳುತ್ತಿರುವವರಂತೆ. ಅದನ್ನು ನೋಡಿ ಸೂರಿಗೆ ಎಲ್ಲಿಂದಲೋ ಶಕ್ತಿ ಬಂದಂತೆ ಮಂತ್ರವನ್ನು ಪೂಜಾರಿಗಳು ಹೇಳಿಕೊಟ್ಟಂತೆ ಪಟಪಟನೆ ಹೇಳಿಬಿಟ್ಟ. ಮಂತ್ರ ಮುಗಿಯುವುದರೊಳಗೆ ದೇವಪ್ಪನಿಗೆ ಪ್ರಜ್ಞೆ ಬರುವ ಎಲ್ಲಾ ಲಕ್ಷಣಗಳು ಕಂಡವು. ಮಂತ್ರದ ಕೊನೆಯ ಸಾಲಿನ ನಂತರ ಅವರ ದೇಹ ಒಮ್ಮೆ ಜೋರಾಗಿ ಸೆಟೆದು ಶಾಂತವಾಯಿತು.
ಈಗ ಸ್ವಲ್ಪ ಅವರ ಮುಖದ ಮೇಲೆ ನೀರು ಹಾಕಿ. ಅವರು ಏಳುತ್ತಾರೆ. ಆದರೆ ನೀವು ಇವತ್ತೇ ನಾನು ಹೇಳಿದವರನ್ನು ಕಾಣಲು ಹೋಗಬೇಕು. ಇಲ್ಲದಿದ್ದರೆ ಸಮಯ ಮೀರುತ್ತದೆ. ಸ್ವಾಮಿಗಳು ಎಚ್ಚರಿಕೆ ನೀಡಿದರು. ನಂತರ ಅವರು ಫೋನು ಕಟ್ಟು ಮಾಡಿಬಿಟ್ಟರು.
ಸೂರಿಗೆ ಇದೆಲ್ಲ ಒಗಟಂತೆ ಕಂಡರೂಅವರ ಮಾತನ್ನೆಲ್ಲಾ ಶಿರಸಾವಹಿಸಿ ಪಾಲಿಸಿದ. ಪೂಜಾರಿಗಳು ಹೇಳಿದ ಹಾಗೆ ಸ್ವಲ್ಪ ನೀರು ಚಿಮುಕಿಸುತ್ತಲೂ ದೇವಪ್ಪನಿಗೆ ಪ್ರಜ್ಞೆ ಬಂತು. ದೇವಪ್ಪನೇ ಕಷ್ಟಪಟ್ಟು ಎದ್ದು ಕುಳಿತರು. ಅವರಿಗೆ ಅಸಾಧ್ಯ ಮೈಕೈ ನೋವಿತ್ತು.
ಸೂರಿ ಮತ್ತು ಶಾಂತಮ್ಮ ಇಬ್ಬರೂ ದೇವಪ್ಪನಿಂದ ಏನಾಯಿತು ಎಂದು ಕೇಳೋದಕ್ಕೆ ಕಾತರರಾಗಿದ್ದರು. ಆದರೆ ದೇವಪ್ಪನ ಪರಿಸ್ಥಿತಿಯನ್ನು ಅರಿತು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಸುಮ್ಮನಾದರು. ಶಾಂತಮ್ಮ ಮಾಡಿದ ಕಾಫಿಯನ್ನು ದೇವಪ್ಪ ಸುಮ್ಮನೆ ಕುಡಿದರು. ನಂತರ ಎದ್ದು ಸ್ನಾನಕ್ಕೆ ಹೊರಟರು. ಅವರಿಗೆ ನಡೆದುದಾವುದೂ ನೆನಪಿರುವಂತೆ ಕಾಣಲಿಲ್ಲ.
* * * * *
ಹಿಂದಿನ ದಿನ ರಾತ್ರಿ. ಸಮಯ ೧.೨೩. ಮನೆಯಲ್ಲಿರುವವರೆಲ್ಲರೂ ಚೆನ್ನಾಗಿಯೇ ನಿದ್ರೆ ಹೋಗಿರುವ ಸಮಯ. ದೇವಪ್ಪನ ರೂಮಿನ ಕಿಟಕಿಯ ಹತ್ತಿರ ಏನೋ ಸುಳಿದಾಟ. ತರಗಲೆಗಳ ಮೇಲೆ ಯಾರೋ ಓಡಾಡಿದಂತಹ ಶಬ್ದ. ಅದು ಯಾವುದೇ ಜೀವಂತವಿರುವ ಪ್ರಾಣಿಯಲ್ಲ. ಅದೊಂದು ನೆರಳು. ಒಂದು ಕೆಟ್ಟ ಶಕ್ತಿ. ಒಂದು ಪ್ರೇತ. ದೇವಪ್ಪನ ಮನೆಯವರಿಗೆ ಕೆಡುಕು ಮಾಡಲೆಂದೇ ಬಂದಿರುವ ಶೈತಾನನ ಪ್ರತಿರೂಪ. ಅದು ತಾನಾಗಿಯೇ ಬಂದದ್ದಲ್ಲ. ದೇವಪ್ಪನಿಗೆ ಆಗದವರಾರೋ ಬೇಕಂತಲೇ ಕಳುಹಿಸಿರುವ ಶಕ್ತಿ. ಅದನ್ನು ಆಹ್ವಾಹನೆ ಮಾಡಿ ಹೆಚ್ಚು ದಿನ ಕಳೆದಿಲ್ಲ. ಹಾಗಾಗಿಯೇ ಅದು ಇನ್ನೂ ತನ್ನ ಪೂರ್ಣ ಶಕ್ತಿ ಕಂಡುಕೊಂಡಿಲ್ಲ. ದಿನಗಳೆದಂತೆ ಅದರ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೆ ಮನೆಯೊಳಗೆ ಬರುವಷ್ಟು ಶಕ್ತಿಯಿನ್ನೂ ಬಂದಿಲ್ಲ. ಆದುದರಿಂದಲೇ ಅಲ್ಲಿಯವರೆಗೂ ಅದು ದೇವಪ್ಪನ ಕಿಟಕಿಯ ಹತ್ತಿರವೇ ನಿಂತು ತನ್ನ ಕರಾಳ ಛಾಯೆ ತೋರಿಸಿದ್ದು.
ಆ ಶಕ್ತಿಗೆ ದೇವಪ್ಪನ ಕೂದಲು ಮತ್ತು ಬಟ್ಟೆಯನ್ನು ತೋರಿಸಿ ಈ ವ್ಯಕ್ತಿಯನ್ನು ಕಾಡಬೇಕು ಎಂದು ಹೇಳಿಕಳುಹಿಸಲಾಗಿತ್ತು. ಅದರಿಂದಾಗಿಯೇ ಅದು ದೇವಪ್ಪನಿಗೆ ಮಾತ್ರವೇ ಕಾಡುತ್ತಿತ್ತು. ಅದು ಮನೆಯವರಿಗೆ ಯಾವುದೇ ತೊಂದರೆ ಕೊಡುವ ಉದ್ದೇಶವಿಟ್ಟುಕೊಳ್ಳದಿದ್ದರೂಅವರೇನಾದರೂ ಆ ಶಕ್ತಿಯ ಕಾರ್ಯಕ್ಕೆ ಅಡ್ಡ ಬಂದರೆ ಅವರಿಗೂ ಕೆಡುಕು ಮಾಡುತ್ತಿತ್ತು. ದೇವಪ್ಪನನ್ನು ಕಾಪಾಡುವ ಯಾವ ಕೆಲಸವನ್ನೂ ಮನೆಯವರು ಮಾಡುವ ಹಾಗಿರಲಿಲ್ಲ. ಮಾಡಿದ್ದೇ ಆದರೆ ಆ ಕೆಟ್ಟ ಶಕ್ತಿಯ ಅವಕೃಪೆಗೆ ಪಾತ್ರರಾಗಬೇಕಿತ್ತು. ಇಂತಹ ಸನ್ನಿವೇಶಗಳಲ್ಲಿ ಮನೆಯವರು ಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯ ಮಾಡುವುದು ಸಾಮಾನ್ಯ. ಆದ್ದರಿಂದ ಅವರೂ ಕಷ್ಟಕ್ಕೊಳಗಾಗುವುದನ್ನು ಬೇಕಾದಷ್ಟು ಕಡೆ ನೋಡಬಹುದು. ಈ ಶಕ್ತಿಗಳಿಗೆ ಮನುಷ್ಯರಿಗಿಂತ ಹಲವು ಪಟ್ಟು ದೈಹಿಕಮತ್ತು ಮಾಂತ್ರಿಕ ಶಕ್ತಿಗಳಿರುತ್ತವೆ. ಅವುಗಳನ್ನು ಉಪಯೋಗಿಸಿಕೊಂಡು ಆ ಶಕ್ತಿಗಳು ಮನುಷ್ಯರ ಮೇಲೆ ನಿಯಂತ್ರಣ ಸಾಧಿಸುತ್ತವೆ. ಅವುಗಳು ಮನುಷ್ಯರ ಮೇಲೆ ಸಂಪೂರ್ಣ ನಿಯಂತ್ರಣ ಸಾದಿಸುವಷ್ಟರಲ್ಲಿ ತಡೆದರಷ್ಟೇ ಉಳಿಗಾಲ. ಇಲ್ಲದಿದ್ದರೆ ಕಥೆ ಮುಗಿದಂತೆಯೇ. 
ದೇವಪ್ಪನ ಕಿಟಕಿಯ ಬಳಿ ಬಂದ ಪ್ರೇತಕ್ಕೆ ದೇವಪ್ಪ ಅವರ ಎಂದಿನ ಜಾಗದಲ್ಲಿ ಕಾಣದಿರುವುದು ಕೋಪ ತರಿಸಿದೆ. ಈ ಶಕ್ತಿಗಳಿಗೆ ತಾವಂದುಕೊಂಡದ್ದು ಸುಲಭವಾಗಿ ಆಗದೆ ಇದ್ದರೆ ಅಸಾಧ್ಯ ಕೋಪ ಬರುತ್ತದೆ. ಅದು ಕೋಪದಲ್ಲಿಯೇ ಮನೆಯನ್ನು ಒಂದು ರೌಂಡು ಸುತ್ತಿ ಬಂದಿದೆ. ಸೂರಿ ಮೊದಲೇ ಹಾಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿದ್ದರಿಂದ ಅದಕ್ಕೆ ದೇವಪ್ಪ ಕಂಡಿಲ್ಲ. ಪ್ರೇತಗಳಿಗೆ ಗೋಡೆಗಳ ಮೂಲಕ ನೋಡೋದು ಕಷ್ಟವೇನಲ್ಲ. ಆದರೆ ಈ ಪ್ರೇತಕ್ಕೆ ಆ ಶಕ್ತಿ ಬರಲು ಇನ್ನೂ ಸ್ವಲ್ಪ ದಿನಗಳು ಬೇಕಿತ್ತಷ್ಟೆ. ಪ್ರೇತಗಳಿಗೆ ಅಂತಹ ಸಮಯದಲ್ಲಿ ಉಪಯೋಗಕ್ಕೆ ಬರಲೆಂದು ಅತ್ಯದ್ಭುತ ವಾಸನಾ ಶಕ್ತಿಯನ್ನೂ ಪಡೆದಿರುತ್ತವೆ. ಅದನ್ನು ಉಪಯೋಗಿಸಿ ಆ ಪ್ರೇತವು ದೇವಪ್ಪ ಹಾಲಿನಲ್ಲೇ ಮಲಗಿರುವುದನ್ನು ಕಂಡುಹಿಡಿದುಕೊಂಡಿತು. ಅದಕ್ಕಿನ್ನೂ ಮನೆಯೊಳಗೆ ಪ್ರವೇಶಿಸುವಷ್ಟು ಶಕ್ತಿಯಿರದ ಕಾರಣ ಅದು ನಿಂತಲ್ಲೇ ಚಡಪಡಿಸಿ ಕೋಪದಲ್ಲಿ ಕೆರಳಿದೆ. 
ದೇವಪ್ಪನಿಗೆ ಅಂದು ರಾತ್ರಿ ಯಾವುದಾದರೂ ರೀತಿಯಲ್ಲಿ ಕಾಡುವ ತನಕ ಪ್ರೇತಕ್ಕೆ ಶಾಂತಿಯಿಲ್ಲ. ಹಾಗೆ ಕಾಡುತ್ತಲೇ ಅದು ಆ ವ್ಯಕ್ತಿಯ ಮೇಲೆ ನಿಯಂತ್ರಣ ಸಾದಿಸೋದು. ಆ ಮೂಲಕ ಅದರ ಶಕ್ತಿಯೂ ವೃದ್ಧಿಗೊಳ್ಳುತ್ತದೆ.  ಅದು ದೇವಪ್ಪನ ಪಕ್ಕದಲ್ಲಿದ್ದ ಕಿಟಕಿಯ ಮೂಲಕ ದೇವಪ್ಪನ ಮಲಗಿರುವ ದೇಹವನ್ನು ಸೇರಲು ಪ್ರಯತ್ನಿಸಿತು. ಅದಕ್ಕೆ ಅದು ಸಾಧ್ಯವಾಗಲಿಲ್ಲ. ಕೆರಳಿ ಕೆಂಡವಾದ ಆ ಪ್ರೇತ ಕಿಟಕಿಯ ಪಕ್ಕದಲ್ಲಿಯೇ ನಿಂತು ಜೋರಗೊಮ್ಮೆ ಕರ್ಕಶ ಧ್ವನಿಯಲ್ಲಿ ಕಿರುಚಿತು. ಅದರ ಶಬ್ದಕ್ಕೆ ದೇವಪ್ಪ ನೆಟ್ಟುಬಿದ್ದು ಎದ್ದುಕೂತರು. ಮನೆಯಲ್ಲಿರುವ ಬೇರ್ಯಾರಿಗೂ ಆ ಶಬ್ದ ಕೇಳಿಸಲೇ ಇಲ್ಲ. ದೇವಪ್ಪ ಹೆದರುತ್ತಾ ಅತ್ತಿತ್ತ ನೋಡಿದರು. ಕೊನೆಗೆ ಕಿಟಕಿಯ ಕಡೆಗೆ ನೋಡುತ್ತಲೇ ಭಯದಿಂದ ನಡುಗಿ ಮಂಚದಿಂದ ಎದ್ದು ದೂರ ಬಂದರು. ಅಲ್ಲಿಯವರೆಗೂ ಬರಿ ನೆರಳಾಗಿ ಕಾಣುತ್ತಿದ್ದ ಪ್ರೇತಕ್ಕೆ ಈಗೊಂದು ರೂಪ ಬಂದಿತ್ತು. ಆದರೆ ದೇವಪ್ಪನನ್ನು ಮಂಚದಿಂದ ಎದ್ದು ದೂರ ಹೋಗುವಂತೆ ಮಾಡಿದ್ದು ಅದರ ಕಣ್ಣುಗಳು. ಕಿಟಕಿಯ ಮೂಲಕ ಆ ಕಣ್ಣುಗಳು ಕೆಂಪಗೆ ಕೆಂಡದಂತೆ ಹೊಳೆಯುತ್ತಿದ್ದವು.
ಆ ಪ್ರೇತವು ಸಂಮೋಹನ ಶಕ್ತಿಯನ್ನೂ ಉಪಯೋಗಿಸಿ ದೇವಪ್ಪನ ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸುವುದಕ್ಕೆ ಪ್ರಯತ್ನಿಸಿತು. ಮೊದಮೊದಲು ದೇವಪ್ಪ ಅದಕ್ಕೆ ಪ್ರತಿರೋಧಿಸಿದರೂ ಬರುಬರುತ್ತಾ ಆ ಪ್ರೇತದ ಶಕ್ತಿ ಹೆಚ್ಚಾಗುತ್ತಾ ಹೋಯಿತು. ಕೊನೆಗೊಮ್ಮೆ ಪ್ರೇತವು ಸಂಪೂರ್ಣವಾಗಿ ದೇವಪ್ಪನ ಮೇಲೆ ಮಾನಸಿಕವಾಗಿ ಹಿಡಿತ ಸಾದಿಸಿಬಿಟ್ಟಿತು. ಇದು ಪ್ರೇತದ ದಬ್ಬಾಳಿಕೆಯ ಎರಡನೇ ಘಟ್ಟ. ಅಲ್ಲಿಂದ ಆ ವ್ಯಕ್ತಿಯು ತನ್ನ ಯೋಚನಾ ಶಕ್ತಿಯನ್ನು ಕಳೆದುಕೊಂಡು ಪ್ರೇತದ ಆಳಾಗುತ್ತಾನೆ. ಪ್ರೇತವು ಆ ವ್ಯಕ್ತಿಯನ್ನು ಒಳಗಿಂದಲೇ ಆಕ್ರಮಿಸಿ ಅವನನ್ನು ಸರ್ವನಾಶಮಾಡಿಬಿಡುತ್ತದೆ. ಪ್ರೇತದ ಶಕ್ತಿಯನ್ನು ತಾಳಲಾರದೆ ಮನುಷ್ಯನ ದೇಹವು ಅತಿಯಾದ ಆಯಾಸದಿಂದ ತನ್ನ ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ಕೊನೆಗೊಂದು ದಿನ ಕೆಟ್ಟ ಶಕ್ತಿಯ ನಿಯಂತ್ರಣದಲ್ಲಿರುವ ವ್ಯಕ್ತಿಯ ದೇಹದ ಒಳಗಿನ ಅಂಗಾಂಗಗಳು ಹಾಳಾಗಿ ಅವನು ರಕ್ತ ಕಾರಿಕೊಂಡು ಸಾಯುತ್ತಾನೆ. ಇದು ಕೊನೆಯ ಘಟ್ಟ. ದೇವಪ್ಪನಿಗೆ ಇದರಿಂದ ತಪ್ಪಿಸಿಕೊಳ್ಳಲು ಇದ್ದುದು ಕೆಲವೇ ಕೆಲವು ದಿನ.
ದೇವಪ್ಪನನ್ನು ನಿಯಂತ್ರಿಸುತ್ತಿರುವ ಆ ಪ್ರೇತ ಅವರಿಗೆ ಮನೆಯಿಂದ ಹೊರಬರಲು ಆದೇಶಿಸುತ್ತದೆ. ದೇವಪ್ಪ ಅದನ್ನು ಮಾತಿಲ್ಲದೆ ಪಾಲಿಸುತ್ತಾರೆ. ಭಾರವಾದ ಹೆಜ್ಜೆಗಳನ್ನಿಟ್ಟುಕೊಂಡು ದೇವಪ್ಪ ಬಾಗಿಲನ್ನು ತೆರೆದು ಮನೆಯ ಮುಂಭಾಗಕ್ಕೆ ಬರುತ್ತಾರೆ. ದೇವಪ್ಪ ಮನೆಯಿಂದ ಹೊರ ಬಂದ ತಕ್ಷಣವೇ ಪ್ರೇತವು ಅವರ ಮೈಯನ್ನು ಹೊಕ್ಕಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ಇನ್ನೂ ಆ ಶಕ್ತಿಯಿಲ್ಲ. ಅದು ಸಾಧ್ಯವಾಗದಿದ್ದಾಗ ಕೋಪಗೊಂಡ ಪ್ರೇತವು ಅವರ ತಲೆಗೆ ಜೋರಾಗಿ ಹೊಡೆಯುತ್ತದೆ. ಆ ಹೊಡೆತದ ರಭಸಕ್ಕೆ ದೇವಪ್ಪ ಮೂರ್ಛೆಬಿದ್ದವರಂತೆ ನೆಲಕ್ಕೆ ಬಿದ್ದಿದ್ದಾರೆ. ಆದರೆ ಪ್ರೇತದ ಕೋಪ ಅಲ್ಲಿಗೇ ನಿಂತಿಲ್ಲ. ಅದು ದೇವಪ್ಪನ ದೇಹವನ್ನು ಅಲ್ಲೆಲ್ಲಾ ನೆಲದಮೇಲೆ ಜೋರಾಗಿ ಎಳೆದಾಡಿದೆ. ಅದರಿಂದ ದೇವಪ್ಪನ ಮೈಯೆಲ್ಲಾ ಅಲ್ಲಲ್ಲಿ ತರಚಿ ಸಣ್ಣ ಪುಟ್ಟ ಗಾಯಗಳಾಗಿವೆ. ತನ್ನ ಕೋಪ ತಣ್ಣಗಾಗುವವರೆಗೂ ದೇವಪ್ಪನನ್ನು ಎಳೆದಾಡಿದ ಪ್ರೇತ ಕೊನೆಗೆ ದೇವಪ್ಪನ ದೇಹವನ್ನು ಅವರ ರೂಮಿನ ಕಿಟಕಿಯ ಹತ್ತಿರ ತಂದು ಹಾಕಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಮನೆಯಲ್ಲಿರುವವರಿಗೆ ಕಿಂಚಿತ್ತೂ ಸುಳಿವಿಲ್ಲ. ಸೂರಿ ಮತ್ತು ಶಾಂತಮ್ಮ ಇನ್ನೂ ಸುಖನಿದ್ರೆಯಲ್ಲಿದ್ದಾರೆ.
ದೇವಪ್ಪನ ದೇಹವನ್ನು ಎಳೆದುಕೊಂಡು ಅವರ ರೂಮಿನ ಕಿಟಕಿಯ ಹತ್ತಿರ ತಂದು ಹಾಕಿತು ಪ್ರೇತ. ಆ ಜಾಗದಲ್ಲಿ ತಂದು ಹಾಕಲಿಕ್ಕೆ  ಒಂದು ಬಲವಾದ ಕಾರಣವೂ ಇತ್ತು. ಅದು ಯಾರಿಗೂ ಇನ್ನೂ ಗೊತ್ತಿರಲಿಲ್ಲ. ದೇವಪ್ಪನ ದೇಹವನ್ನು ಹೊಕ್ಕಲಿಕ್ಕೆ ಅದು ಸೂಕ್ತವಾದ ಜಾಗ. ಆ ಜಾಗದಲ್ಲಿ ಅದಕ್ಕೆ ಅದ್ಬುತ ಶಕ್ತಿ ಬರುತ್ತಿತ್ತು. ಬೇರಾವುದೇ ಜಾಗದಲ್ಲಾದರೆ ಅದಕ್ಕೆ ಸದ್ಯಕ್ಕೆ ಶಕ್ತಿ ಕಡಿಮೆ. ಅದರಿಂದಲೇ ಅದು ದೇವಪ್ಪನನ್ನು ಅದೇ ಕಿಟಕಿಯಿಂದ ಪ್ರತೀದಿನ ಕಾಡುತ್ತಿದ್ದುದು. ಅಂದು ದೇವಪ್ಪನ ದೇಹವನ್ನು ಒಮ್ಮೆ ಹೊಕ್ಕಿಬಿಟ್ಟರೆ ಪ್ರೇತಕ್ಕೆ ಅದೊಂದು ಮೈಲುಗಲ್ಲು. ಒಮ್ಮೆ ಪ್ರೇತ ಮೈಮೇಲೆ ಬಂದರೆ ಮುಗಿಯಿತು. ಎರಡನೇ ಬಾರಿ ಬರುವುದಕ್ಕೆ ಹೆಚ್ಚು ಕಷ್ಟವೇ ಇಲ್ಲ.
ಅಷ್ಟರಲ್ಲಿ ದೇವಪ್ಪನಿಗೆ ನಿಧಾನವಾಗಿ ಪ್ರಜ್ಞೆ ಬರುವುದಕ್ಕೆ ಶುರುವಾಗಿದೆ. ದೇವಪ್ಪ ಪ್ರಜ್ಞೆಯಲ್ಲಿರುವಾಗ ಅವರ ಮೈಯಲ್ಲಿ ಹೊಕ್ಕಲು ಸಾಧ್ಯವಿಲ್ಲವೆಂದು ಅರಿತಿರುವ ಪ್ರೇತ ಅವರ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡಿದೆ. ಅವರ ಕೈಗಳನ್ನು ಹಿಡಿದು ಎರೆಡೂ ಕಡೆಯಿಂದ ತನ್ನೆಲ್ಲಾ ಶಕ್ತಿಬಿಟ್ಟು ಎಳೆಯುತ್ತಿದೆ. ಅದರ ಶಕ್ತಿ ಇನ್ನೂ ಸ್ವಲ್ಪವೇ ಹೆಚ್ಚಿದ್ದರೂ ದೇವಪ್ಪನ ಕೈಗಳು ಭುಜದಿಂದ ಕಿತ್ತೇ ಬರಬೇಕಿತ್ತು. ಅವರ ಅದೃಷ್ಟ ಅವತ್ತು ಚೆನ್ನಾಗಿತ್ತಷ್ಟೆ. ಆದರೂ ಆ ಎಳೆತದ  ರಭಸಕ್ಕೆ ದೇವಪ್ಪನ  ಮೈಯೆಲ್ಲಾ ಸೆಟೆದು ಅವರ ಕಾಲುಗಳು ಸೋತು ಅವರು ತನ್ನ ಮೊಣಕಾಲಮೇಲೆ ಕುಳಿತುಬಿಟ್ಟರು. ಅವರ ಮೈಮೇಲೆ ಸಂಪೂರ್ಣವಾಗಿ ಹೊಕ್ಕಲಿಕ್ಕೆ ಪ್ರೇತಕ್ಕೆ ಹೆಚ್ಚೇನೂ ಸಮಯ ಬೇಕಿರಲಿಲ್ಲ. ಆ ಪ್ರೇತ ಹಾಗೆಯೇ ಇನ್ನೂ ಸ್ವಲ್ಪ ಹೊತ್ತು  ದೇವಪ್ಪನ ಮೇಲೆ ಹಿಡಿತ ಸಾಧಿಸಿದ್ದರೂ ಸಾಕಿತ್ತು. ದೇವಪ್ಪನನ್ನು ಅದು ಸಂಪೂರ್ಣವಾಗಿ ಅವರಿಸಿಬಿಡೋದು. ಆಗಲೇ ಶಾಂತಮ್ಮ ಬಂದದ್ದು. ಪ್ರೇತಕ್ಕೆ ಶಾಂತಮ್ಮನ ಬಳಿ ಯಾವುದೇ ಸಂಬಂಧವಿಲ್ಲ. ಹಾಗಾಗಿಯೇ ಅದು ಅವರ ಮುಂದೆಯೂ ದೇವಪ್ಪನ ಮೇಲಿನ ಆಕ್ರಮಣ ಮುಂದುವರೆಸಿದ್ದು. ಎಲ್ಲಿಯವರೆಗೂ ಶಾಂತಮ್ಮ ದೂರವೇ ಇರುವರೋಅಲ್ಲಿಯವರೆಗೂ ಪ್ರೇತ ಶಾಂತಮ್ಮನಿಗೆ ಏನೂ ತೊಂದರೆ ಕೊಡುವುದಿಲ್ಲ. ಶಾಂತಮ್ಮ ಯಾವಾಗ ದೇವಪ್ಪನಿಗೆ ಸಹಾಯ ಮಾಡಲಿಕ್ಕೆ ಮುಂದೆ ಬಂದರೋಆಗಲೇ ಆ ಪ್ರೇತ ದೇವಪ್ಪನ ಮೂಲಕ ಅವರ ಕಡೆಗೆ ಕೆಂಗಣ್ಣಿನಿಂದ ನೋಡಿದ್ದು.
ಶಾಂತಮ್ಮ ದೇವಪ್ಪನನ್ನು ನೋಡಿ ಹೆದರಿದ್ದರೂಒಂದು ಒಳ್ಳೆಯ ಕೆಲಸವನ್ನು ಮಾಡಿದ್ದರು. ಮನಸ್ಸಿನಲ್ಲೇ ಅವರು ದೇವಪ್ಪನನ್ನು ನೋಡುತ್ತಾ ಹನುಮಾನ್ ಚಾಲೀಸಾ ಹೇಳಲು ಶುರುಮಾಡಿದರು. ಕೆಟ್ಟ ಶಕ್ತಿಗಳಿಗೆಲ್ಲಾ ಹನುಮಾನ್ ಚಾಲೀಸಾ ರಾಮಬಾಣವಿದ್ದಂತೆ. ಎಂತಹ ಶೈತಾನ್ ಇದ್ದರೂ ಅಲ್ಲಿಂದ ಓಡಿಹೋಗಬೇಕು. ಅಂತಹ ಶಕ್ತಿಯಿದೆ ಅದಕ್ಕೆ. ಅದೆಲ್ಲಿಂದ ಕಲಿತಿದ್ದಳೋ ಶಾಂತಮ್ಮಸಮಯಕ್ಕೆ ಸರಿಯಾಗಿ ಅದನ್ನು ಮನದಲ್ಲೇ ಪಠಿಸಲು ಶುರುಮಾಡಿದಮೇಲೆಯೇ ಪ್ರೇತ ಮತ್ತು ದೇವಪ್ಪನ ಒಳಕಾಳಗದಲ್ಲಿ ದೇವಪ್ಪನ ಕೈ ಮೇಲಾದುದು. ಅತ್ತ ಹನುಮಾನ್ ಚಾಲೀಸಾ ಮುಂದುವರೆದಷ್ಟೂ ದೇವಪ್ಪನ ಶಕ್ತಿ ಹಿಗ್ಗುತ್ತಾ ಹೋಯಿತು. ಹಾಗೆಯೇ ಪ್ರೇತದ ಶಕ್ತಿ ಕುಗ್ಗುತ್ತಾ ಹೋಯಿತು. ಹನುಮಾನ್ ಚಾಲೀಸಾ ಮುಗಿಯುವುದರೊಳಗೆ ಪ್ರೇತ ಅಲ್ಲಿಂದ ಜಾಗ ಖಾಲಿಮಾಡಿದರೆ ಅದು ಉಳಿದಂತೆ. ಹಾಗೆ ಹನುಮಾನ್ ಚಾಲೀಸಾ ಮುಗಿಯುವವರೆಗೂ ಜಾಗ ಖಾಲಿಮಾಡದ ಪ್ರೇತಗಳು ಯಾವುವೂ ಮತ್ತೊಂದು ರಾತ್ರಿ ಕಂಡಿಲ್ಲ.  
ಪ್ರೇತಕ್ಕೆ ತನ್ನ ಶಕ್ತಿ ಯಾವಾಗ ದೇವಪ್ಪನನ್ನು ಹಿಡಿದಿಡಲಾರದು ಎಂದು ಅರಿವಾಯ್ತೋಅದಕ್ಕೆ ಅಲ್ಲಿಂದ ಜಾಗ ಖಾಲಿಮಾಡುವುದೇ ಒಳಿತೆನ್ನಿಸಿತು. ಅದೇ ಸಮಯಕ್ಕೆ ದೇವಪ್ಪನೂ ತನ್ನೆಲ್ಲಾ ಶಕ್ತಿಯನ್ನು ಬಿಟ್ಟು ಅದನ್ನು ಮೈಯಿಂದ ಹೊರಹಾಕಲು ಪ್ರಯತ್ನಿಸಿದರು. ಅದಕ್ಕೇ ಅವರು ಕೊನೆಗೆ ಹಾಗೆ ಜೋರಾಗಿ ಕೂಗಿದ್ದು. ಆ ಕ್ಷಣದಲ್ಲಿಯೇ ಪ್ರೇತ ದೇವಪ್ಪನ ದೇಹದ ಮೇಲಿನ ಹಿಡಿತ ಕಳೆದುಕೊಂಡು ಅಲ್ಲಿಂದ ಪರಾರಿಯಾಯಿತು. ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡಿದ್ದ ದೇವಪ್ಪ ಕುಸಿದು ಬಿದ್ದರು. ಆಗಲೇ ಸೂರಿ ಅವರನ್ನು ಎತ್ತಿಕೊಂಡು ಬಂದು ಮನೆಯೊಳಗೆ ಮಲಗಿಸಿದ್ದು. ಶಾಂತಮ್ಮ ಹನುಮಾನ್ ಚಾಲೀಸಾ ಮುಗಿಯುವವರೆಗೂ ಅಲ್ಲಿಯೇ ನಿಂತಿದ್ದು ನಂತರ ಒಳಗೆ ಬಂದರು. ಇತ್ತ ತನ್ನ ಕೆಲಸ ಮುಗಿಸದಿದ್ದುದಕ್ಕೆ ಪ್ರೇತ ಮನೆಯ ಸುತ್ತೆಲ್ಲಾ ಜೋರಾಗಿ ಕಿರುಚಾಡುತ್ತಾ ಓಡಾಡಿತು. ಇದಕ್ಕೆಲ್ಲಾ ಕಾರಣ ಶಾಂತಮ್ಮನೇ ಎಂದು ತನ್ನ ವಕ್ರದೃಷ್ಟಿಯನ್ನು ಶಾಂತಮ್ಮನ ಕಡೆಗೆ ತಿರುಗಿಸಿತು.
******
ಪೂಜಾರಿಗಳು ಅಷ್ಟು ಬಾರಿ ಅವರು ಹೇಳಿದವರನ್ನು ಕಾಣಲು ಇಂದೇ ಹೋಗಿ ಎಂದು ಹೇಳಿದ್ದು ಸೂರಿಗೆ ತಲೆನೋವು ತಂದಿತ್ತು. ದೇವಪ್ಪನಿಗೆ ಈಗಷ್ಟೆ ಸ್ವಲ್ಪ ಸರಿಹೋಗಿದ್ದು ಅವರನ್ನು ಅಷ್ಟು ದೂರದ ಪ್ರಯಾಣಕ್ಕೆ ಕರೆದುಕೊಂಡು ಹೋಗುವುದು ಸೂಕ್ತವೇ ಎಂದು ಪ್ರಶ್ನಿಸಿಕೊಂಡ. ಹೋಗದಿದ್ದರೆ ದೇವಪ್ಪನ ಸ್ಥಿತಿ ಮತ್ತೆ ಕೆಟ್ಟದಾಗಬಹುದು ಎಂಬ ಯೋಚನೆಯೂ ಬಂತು. ನಿನ್ನೆ ರಾತ್ರಿ ನಡೆದ ಘಟನೆಗಳನ್ನೆಲ್ಲಾ ಅವಲೋಕಿಸಿಎಷ್ಟೇ ಕಷ್ಟವಾದರೂ ಪರವಾಗಿಲ್ಲಇವತ್ತು ಹೋಗಿಬರೋಣ ಎಂದು ನಿರ್ಧಾರ ಮಾಡಿ ತನ್ನ ತಂದೆಯ ಬಳಿ ಮಾತನಾಡಲು ಹೊರಟ.
ದೇವಪ್ಪ ದೈಹಿಕವಾಗಿ ಅಂತಹದೊಂದು ಪ್ರಯಾಣಕ್ಕೆ ತಯಾರಿರಲಿಲ್ಲ. ಅವರಿಗೆ ಬಹುವಾಗಿಯೇ ವಿರಾಮದ ಅವಶ್ಯಕತೆಯಿತ್ತು. ಆದರೆ ಅವರಿಗೆ ಸಮಯ ಇರಲಿಲ್ಲ. ಅದು ಅವರಿಗೂ ತಿಳಿದಿದ್ದ ವಿಷಯ. ಅದರಲ್ಲೂ ಪೂಜಾರಿಗಳು ಅಷ್ಟು ಬಾರಿ ಅಲ್ಲಿಗೆ ಹೋಗಿಬನ್ನಿ ಎಂದು ಹೇಳಿದ್ದು ಚೆನ್ನಾಗಿ ನೆನಪಿತ್ತು. ಹಾಗಾಗಿ ಅವರು ಸೂರಿಯ ಜೊತೆ ಹೊರಡಲು ರೆಡಿಯಾದರು. ಸೂರಿ ತನ್ನ ತಂದೆಗೆ ಅನುಕೂಲವಾಗಲೆಂದು ಊರಿನಿಂದ ಯಾರದೋ ಸಣ್ಣ ವ್ಯಾನ್ ತೆಗೆದುಕೊಂಡು ಬರಲು ನಿರ್ಧರಿಸಿದ. ಅವನು ಮನೆಯಿಂದ ಹೊರಡುವ ಮುಂಚೆ ಶಾಂತಮ್ಮ ದೇವರಿಗೆ ಪೂಜೆ ಮಾಡಿ ಅವನ ಕೈಗೆ ಅಂತ್ರ ಕಟ್ಟಿದರು. ಅದ್ಯಾವ ದೇವರದೆಂದು ಕೇಳುವ ಗೋಜಿಗೂ ಹೋಗಲಿಲ್ಲ ಸೂರಿ. ಮೊದಲು ತನ್ನ ಮನೆಯವರಿಗಿರುವ ಅಪಾಯ ತೊಲಗಬೇಕು ಎಂದು ಪಣತೊಟ್ಟು ನಿಂತ. 
ಅವನ ಅದೃಷ್ಟಕ್ಕೆ ಬೇಗನೆ ವ್ಯಾನಿನ ವ್ಯವಸ್ಥೆಯಾಯಿತು. ಅದರ ಖರ್ಚೆಲ್ಲಾ ಮಾತನಾಡಿಕೊಂಡು ಅದನ್ನು ಮನೆಯ ಮುಂದೆ ತಂದು ನಿಲ್ಲಿಸಿದ. ದೇವಪ್ಪ ತಯಾರಾಗುತ್ತಿದ್ದರು. ಸೂರಿಯೂ ಬೇಗಬೇಗನೆ ಸ್ನಾನ ಮುಗಿಸಿ ಹೊರಡಲು ಅನುವಾದ. ಶಾಂತಮ್ಮ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಲು ದೇವಪ್ಪ ಒಪ್ಪಲಿಲ್ಲ. ಹಾಗಾಗಿ ಅವರೂ ಹೊರಡಲು ಅಣಿಯಾದರು. ಇನ್ನು ಹರೀಶನೂ ಅಷ್ಟರಲ್ಲೇ ಮನೆಗೆ ಬರುವುದಕ್ಕಿತ್ತು. ಅವನನ್ನು ಮಾತ್ರ ಯಾಕೆ ಬಿಟ್ಟು ಹೋಗೋದು ಎಂದು ಅವನಿಗೆ ಕಾದು ಕುಳಿತರು. ಸೂರಿಗೆ ಮನೆಯವರೆಲ್ಲರೂ ಹೊರಟದ್ದು ಇಷ್ಟವಿರಲಿಲ್ಲ. ಅದನ್ನು ತನ್ನ ತಂದೆಯ ಹತ್ತಿರ ಹೇಳಿಕೊಂಡ. ಆದರೆ ದೇವಪ್ಪ ಕೇಳಲಿಲ್ಲ. ಅವರಿಗೆ ಯಾರನ್ನೂ ಮನೆಯಲ್ಲಿ ಬಿಟ್ಟು ಹೋಗೋದಕ್ಕೆ ಇಷ್ಟವಿರಲಿಲ್ಲ. ಅದರಲ್ಲೂ ಅವರಿಗೆ ಹಿಂದಿನ ದಿನದ ಘಟನೆಗಳನ್ನು ನೆನೆಸಿಕೊಂಡು ಮತ್ತೆಂದೂ ಈ ಮನೆಗೆ ವಾಪಸ್ಸು ಬರಲೇ ಬಾರದು ಎನ್ನಿಸಿಬಿಟ್ಟಿತ್ತು.
ಎಂಟು ಗಂಟೆ ಸುಮಾರಿಗೆ ಹರೀಶ ಮನೆಗೆ ಬಂದ. ಅವನನ್ನು ಕಾದುಕೊಂಡು ಎಲ್ಲರೂ ಬಾಗಿಲ ಬಳಿಯೇ ನಿಂತಿದ್ದರು. ಹರೀಶನಿಗೆ ಇವರೇಕೆ ಹೀಗೆ ನಿಂತಿದ್ದಾರೆ ಎಂದು ಅನ್ನಿಸಿದರೂ ಅವರ ಮುಖಭಾವದಿಂದ ಅಲ್ಲೇನೋ ಸರಿಯಿಲ್ಲ ಎಂದನಿಸಿತು. ಸೂರಿ ಅವನಿಗೆ ಬೇಗನೆ ಮುಖತೊಳೆದು ತಿಂಡಿ ತಿನ್ನಲು ಹೇಳಿದ. ಅವನು ತಿಂಡಿ ತಿನ್ನುವಾಗ ಅಲ್ಲಿಯವರೆಗೂ ಆದುದನ್ನೆಲ್ಲಾ ಸಂಕ್ಷಿಪ್ತವಾಗಿ ತಿಳಿಸಿದ. ತನಗೆ ತನ್ನ ತಂದೆಯಿಂದ ಫೋನು ಬಂದೆ ಇಲ್ಲವೆಂದು ತಿಳಿದು ಹರೀಶನ ಮುಖ ಬಿಳಿಚಿತು. ಮೊದಲೇ ಹರೀಶ ಶಾಂತಮ್ಮನಂತೆ ಮಹಾನ್ ದೈವಭಕ್ತ. ಅವನಿಗೆ ಇದನ್ನೆಲ್ಲಾ ಪ್ರಶ್ನಿಸುವ ಧೈರ್ಯವೇ ಬರಲಿಲ್ಲ. ಸೂರಿಯೇ ಹೇಳುತ್ತಿರಬೇಕಾದರೆ ಇದು ಯಾವುದೊ ಕೆಟ್ಟ ಶಕ್ತಿಯ ಕುತಂತ್ರವೇ ಇರಬೇಕು ಎಂದು ಸುಮ್ಮನಾದ. ಎಲ್ಲರೂ ತಯಾರಾದ ಮೇಲೆ ಸೂರಿ ಅವರನ್ನು ಕೂರಿಸಿಕೊಂಡು ಹೊರಟ. ಆ ನಾಲ್ಕು ಜನರ ಜೊತೆ ಆ ಕೆಟ್ಟ ಶಕ್ತಿಯೂ ಅವರ ಜೊತೆಗೆ ಅದೇ ವ್ಯಾನಿನಲ್ಲೇ ಇದ್ದುದು ಯಾರಿಗೂ ಗೊತ್ತಾಗಲಿಲ್ಲ. ಅವರೆಲ್ಲರನ್ನೂ ಒಂದೇ ಕಡೆ ಸೇರಿಸುವ ಅದರ ಉಪಾಯ ಫಲಿಸಿತ್ತು.

ಮುಂದುವರೆಯುವುದು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...